ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ : ತುಮಕೂರಿನಲ್ಲೊಂದು ಸಂಭ್ರಮ

ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ : ತುಮಕೂರಿನಲ್ಲೊಂದು ಸಂಭ್ರಮ

********************************

ಡಾ. ನಾಗಭೂಷಣ ಬಗ್ಗನಡು

‘ಒಂದು’ ಕೇಂದ್ರವನ್ನು ನಿರಾಕರಿಸಿ ಒಂದೂ ಮುಕ್ಕಾಲು ಗಂಟೆಗಳ ಕಾಲ ನೋಡಿಸಿಕೊಳ್ಳುವ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ ನಾಟಕ ದಲಿತ ಪರಂಪರೆ ಸಂಕಟಗಳ ಸರಮಾಲೆಯನ್ನೇ ನಮ್ಮ ಮುಂದಿಡುತ್ತದೆ. ಒಂದು ಮೂಳೆ ಪ್ರಸಂಗದಿಂದ ಆರಂಭವಾಗುವ ನಾಟಕ ನೋಡುಗರನ್ನು ಹಾಸ್ಯ ಭರಿತ ಸಂಕಟಗಳಿಂದ ತೊಯ್ಯುಸುತ್ತದೆ. ದಲಿತರಿಗೆ ಹಳ್ಳಿಗಳು ಶೋಷಣೆಯ ಕೂಪಗಳು ಎಂಬುವುದರಿಂದ ಆರಂಭವಾಗಿ ನಗರಗಳಲ್ಲಿಯೂ ಅದೇ ಸರ್ಕಲ್ ನಲ್ಲಿ ಬದುಕಬೇಕಾದ ಆಧುನಿಕ ದಲಿತ ಸಂಕಟಗಳನ್ನು ಅನಾವರಣ ಮಾಡುವ ಬಾಬ್ ಮಾರ್ಲಿ ಕನ್ನಡ ನಾಟಕ ರಂಗ ಭೂಮಿಗೆ ಅಪೂರ್ವವಾದ ಕೊಡುಗೆ.

ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಅಲಕ್ಷಿತ ಪರಂಪರೆಗಳ ಸಂಕಟಗಳನ್ನು ರಂಗಭೂಮಿಯ ಮೇಲೆ ತಂದು ಆಂದೋಲನವನ್ನೇ ರೂಪಿಸಿದ್ದ ಸಿಜಿಕೆಯ ಪರಂಪರೆಯ ಕೊಂಡಿ,ಮತ್ತಷ್ಟು ಆಧುನಿಕ ಪರಿಭಾಷೆಯಲ್ಲಿ ತಳಮೂಲ ಪರಂಪರೆಗಳ ತಿಳುವಳಿಕೆಗಳ ನೆನಪುಗಳನ್ನು ರಂಗದ ಮೇಲೆ ಯಶಸ್ವಿಯಾಗಿ ತರುತ್ತಿರುವ ಕೆ. ಪಿ.ಲಕ್ಷ್ಮಣ್ ಮತ್ತು ವಿ.ಎಲ್.ನರಸಿಂಹಮೂರ್ತಿ ಕನ್ನಡ ರಂಗಭೂಮಿಯ ಭರವಸೆಯ ನಾಟಕಕಾರರು ಮತ್ತು ನಿರ್ದೇಶಕರು.

ಮಾಂಸಾಹಾರ ಮತ್ತು ಮಾಂಸ ತಿನ್ನುವವರ ಆಚರಣೆಗಳೇ ಶೋಷಣೆಗೆ ಮೂಲ ಕಾರಣ ಎಂದು ಭೀಗುವ ಪ್ರಭೂತಿಗಳಿಗೆ ಅವೇ ತಳಮೂಲ ನೆಲಮೂಲ ಸಂಸ್ಕೃತಿಯ ಐಡೆಂಟಿಟಿ ಎಂಬುದನ್ನು ಪ್ರಬಲವಾಗಿ ಪ್ರತಿಪಾದಿಸುವ ನಾಟಕ.

ಮಿಣುಕು ಹುಳು,ಉತ್ತರಾಣಿ, ತುಂಬೆ, ಎಕ್ಕೆ ಇವುಗಳ ನೆನಪುಗಳ ಮೂಲಕ ಜೀವಂತ ಸಂಸ್ಕೃತಿ ಅನಾವರಣ ಈ ನಾಟಕದ ಹೆಗ್ಗುರುತು.

ತಾಯಿ ಮಗಳನ್ನು ಇಬ್ಬರನ್ನು ಕೂಡವ ಹೊರ ಸಂಸ್ಕೃತಿಯೊಂದರ ಸಮುದಾಯಕ್ಕೆ ಬೀಜಗಳನ್ನು ಕಿತ್ತು ಕೈಗೆ ಕೊಟ್ಟ ಪರಂಪರೆಯೊಂದರ ದಾಖಲೆ ಈ ನಾಟಕದ ಯಶಸ್ವಿಯಲ್ಲೊಂದು.

 

ಮಾರಮ್ಮನ ಪುರಾಣ ಪ್ರಸಂಗವನ್ನು ಅತ್ಯಂತ ಆರ್ದ್ರವಾಗಿ ನಿರೂಪಿಸಿದ, ಕ್ರೌರ್ಯಕ್ಕೆ ತುತ್ತಾದ ಪರಂಪರೆಯ ವಾರಸುದಾರರನ್ನೇ ಅದೇ ಕ್ರೌರ್ಯದಲ್ಲಿ ಮಿಂದೇಳುವಂತೆ ಮಾಡುವ ಬ್ರಾಹ್ಮಣ್ಯ ಪರಂಪರೆಯ ಚೋಧ್ಯವನ್ನು ಈ ನಾಟಕ ಅತ್ಯಂತ ಧಾರಣವಾಗಿ ಮುಂದಿಡುತ್ತದೆ.

 

ಜಮೈಕಾ  ದೇಶದ ಸಂಗೀತಗಾರ ಬಾಬ್ ಮಾರ್ಲಿಯ ಜೀವನ ವೃತ್ತಾಂತವನ್ನು ಹೋಲುವ ಕನ್ನಡ ದಲಿತ ಪರಂಪರೆ ನೆನಪುಗಳ ಮೂಲಕ ನೋಡುವ ಈ ನಾಟಕ ಕನ್ನಡ ರಂಗಭೂಮಿಗೆ ವಿಶಿಷ್ಟ ಕೊಡುಗೆ.

ಈ ನಾಟಕವನ್ನು ತುಮಕೂರು ಜನಕ್ಕೆ ತಲುಪಿಸಿದ ಡ್ಯಾಗೇರಳ್ಳಿ ಮತ್ತು ತಂಡಕ್ಕೆ ನಮಸ್ಕಾರ

**********

ಡಾ. ನಾಗಭೂಷಣ ಬಗ್ಗನಡು