ವಿಚಾರ ಕ್ರಾಂತಿಗೆ ಆಹ್ವಾನ – ಕುವೆಂಪು – ವಿಚಾರ ಕ್ರಾಂತಿಯ ಲೇಖನ ಮಾಲೆ

ವಿಚಾರ ಕ್ರಾಂತಿಗೆ ಆಹ್ವಾನ – ಕುವೆಂಪು

ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ ಕೃತಿಯಲ್ಲಿ ಬರುವ ‘ಪ್ರಶ್ನೆಗೆ ಉತ್ತರಗಳು’ ಎಂಬ ಆಯ್ದ ಭಾಗ

(ನನ್ನ ಉದ್ಘಾಟನ ಭಾಷಣವನ್ನು ತುಸು ಎಚ್ಚರಿಕೆಯಿಂದ ಅಧ್ಯಯನ ಮಾಡಿದರೆ ನಿಮ್ಮ ಪ್ರಶ್ನೆಗೆ ಉತ್ತರ ದೊರೆಯುತ್ತದೆ)

  1. ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದ ವಿವಾದಗಳಲ್ಲಿ ಭಾಗವಹಿಸುವ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟತೆಯ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗೆದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

“ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೆ ನಾನು ಅದನ್ನು ‘ತೊಲಗಾಚೆ!’ ಎಂದು ತೊಲಗಿಸಿದ್ದೇನೆ. ಆದರೂ ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷಿ’ಯ ಈ ವಿಚಾರವಾಗಿ ನಿನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದುದಿರಲಿ, ಅಪಕೀರ್ತಿ ಬಂದರೂ ಸತ್ಯ ಹೇಳುವುದನ್ನು ಬಿಡುವುದಿಲ್ಲ.

2.ಕೆಟ್ಟಿರಲಿ ಕೆಡದಿರಲಿ ಭಾರತೀಯ ಸಂಸ್ಕøತಿ ಎಂದರೆ ವೈದಿಕ ಸಂಸ್ಕøತಿಯೆ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?

“ಇದೊಂದು ತಪ್ಪು ಅಭಿಪ್ರಾಯ, ಭಾರತೀಯ ಸಂಸ್ಕøತಿ ಬರಿಯ ವೈದಿಕವಲ್ಲ; ಅವೈದಿಕವೂ ಅದರ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ದ ಜೈನಗಳಲ್ಲದೆ ನ್ಯಾಯ ವೈಶೇಷಿಕ ಸಾಂಖ್ಯ ಯೋಗ ದರ್ಶನಗಳೂ ವೇದದ ಪರಮ ಪ್ರಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಎನ್ನುವುದಿಲ್ಲ. ನನ್ನದು ವಿಶ್ವ ಸಂಸ್ಕøತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ), ಶಾಶ್ವತವೂ ಆಧ್ಯಾತ್ಮಿಕ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ”

3.ಬ್ರಾಹ್ಮಣ ಜಾತಿಯ ಹಲವು ಒಳ ಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ಮಾತ್ರ ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?

“ನನ್ನ ಭಾಷಣ ಬ್ರಾಹ್ಮಣರಿಗಾಗಲಿ ಮಾಧ್ವರಿಗಾಗಲಿ ನಿರ್ದೇಶಿಸಿದ್ದಲ್ಲ. ಒಕ್ಕೂಟದವರಿಗೆ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದೆ. ಪ್ರಾಸಂಗಿಕವಾಗಿ , ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು, ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದ್ದರಿಂದ, ಮಾಧ್ವ ಜಯತೀರ್ಥರ ನಿರ್ದೇಶನಗಳನ್ನು ಕೊಟ್ಟೆನಷ್ಟೆ! ಆಮೇಲೆ ಗುಲ್ಲೆದ್ದ ಮತಬ್ರಾಂತರ ಗಲಾಟೆಯಿಂದಲೆ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು’

  1. ತಮ್ಮ ಕಾವ್ಯದ ಮತ್ತು ಮುಖ್ಯ ಕಥಾ ಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?

“ಅವರ ತಲೆ! ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲಿಯೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕøತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ; ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೇ ಒಕ್ಕೂಟದ ಹುಡುಗರನ್ನು ಅಂತಹ ತಪ್ಪು ದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಒಡವೆಯನ್ನು ಅಕ್ಕಸಾಲಿಗ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೆ? ಗ್ರಾವಿಟೇಷನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೆ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ಬ್ರಹ್ಮನ್ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಋಷಿಯ  ಸೃಷ್ಟಿಯಾಗುತ್ತದೆಯೆ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದದ್ದು, ಆ ಋಷಿ ಮಾತ್ರವಲ್ಲ, ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನನಿಗೆ ಪೂರ್ವದಲ್ಲಿಯೇ ಇತ್ತು., ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ. ಅಂತಹ ಸತ್ಯವನ್ನು ನಿತ್ಯ, ಸನಾತನ, ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನದರ್ಶನ ಅಂತಹ ಅಚ್ಯುತ್ತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ಜರೆಯುವ ರೀತಿಯಲ್ಲಿ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಬವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ”

  1. ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತ “ ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡಕಬೇಕು” ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?

“ ಶುದ್ದ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ, ಪುರೋಹಿತಶಾಹಿ ವಿರೋಧಿ.  ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಾಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಸ್ಪದ. ನನ್ನ ಮೂವತ್ತು ನಲ್ವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸುವುದಕ್ಕಾಗಿ ಇಂದು ನಾನು ನಲ್ವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಲ್ಳುವುದಕ್ಕೆ ಹಾಗೆ ಮಾತನಡಿದನೆಂದು ಹೇಳುವುದು ನನ್ನ ವೈಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲ್ವತ್ತು ಐವತ್ತು ವರ್ಷಗಳಿಂದಲು ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯು ಹೇಳುತ್ತಾ ಬಂದಿರುವುದನ್ನೆ ಮೊನ್ನೆಯೂ ಹೇಳಿದ್ದೇನೆ, ಅಷ್ಟೆ. ಆದರೆ ಇವರು ಯಾರೂ, ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ.

(ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)”

  1. ‘ಬ್ರಾಹ್ಮಣ’ ‘ಶ್ರೂದ್ರ’ ‘ಮಣ್ಣಿನ ವಾಸನೆ’ ‘ಅಮೂರ್ತ ಭಾವನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿ ಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ ಶೂದ್ರರ ಭಾಷೆ, ಅನುಭವ, ದೃಷ್ಟಿಯನ್ನು ಕುರಿತು ತಮ್ಮ ವಿಶ್ಲೇಷಣೆ ಏನು?

“ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಶಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕುತಪ್ಪಿಸಿ ಬದುಕಿನ ರುಜುಮಾರ್ಗದಿಮದ ಕಂಟಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೆ ಇಂದೂ ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತ ಮೌಢ್ಯದಿಂದ ಪಾರುಮಾಡಿ ಅವರನ್ನು ವೈಚಾರಿಕ ಬುದ್ದಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ ಜಾತಿ ಭೇದ ಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತ ವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ, ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರ ಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಾಡಿಕೊಳ್ಳುವುದನ್ನು ಒಡೆನೆಯೆ ನಿಲ್ಲಿಸಿಬಿಡಿ. ( ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಇನ್ನೂ ಸ್ಪಷ್ಟಗೊಳ್ಳುತ್ತವೆ. )

  1. ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲವಣೆ, ಕನ್ನಡ ಮಾದ್ಯಮ ಕುರಿತು ಮಾತನಾಡುತ್ತಿದ್ದರೂ ಹೆಸರಿನ ಬದಲಾವಣೆ ಮಾತ್ರ ಆಗಿ ಮಾದ್ಯಮದ ಪ್ರಶ್ನೆ ಹಾಗೆ ಉಳಿದಿದೆ: ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?

“ಹಾಗೇನಿಲ್ಲ. ಈಗಾಗಲೇ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರ್ಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾನಿಲಯಗಳು ಎಲ್ಲವೂ ಕನ್ನಡ ಮಾದ್ಯಮ ತತ್ವವನ್ನೊಪ್ಪಿ ಕ್ರಿಯಾಶೀಲವಾಗಿ ಮುಂದುವರಿಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.”

  1. ಈ ನಾಡ ತರುಣರಿಗೆ ತಮ್ಮ ಹಿತವಚನವೇನು?

“ನನ್ನ ಸಾಹಿತ್ಯದಲ್ಲಿ ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರನ್ನು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣವನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ, -ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೆ ಎಲ್ಲರ ಧ್ಯೇಯಮಂತ್ರಗಳಾಗಲಿ!”

ರಾಷ್ಟ್ರಕವಿ ಕುವೆಂಪು ಅವರ ಪೂರ್ಣ ಪರಿಚಯ

ಕುವೆಂಪು ಅವರು ಅವರ ತಾಯಿಯ ತವರೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೀರೆಕೊಡಿಗೆ ಎಂಬಲ್ಲಿ ಡಿಸೆಂಬರ್ 29, 1904 ರಲ್ಲಿ ಜನಸಿದರು. ತಂದೆ ವೆಂಕಟಪ್ಪ ತಾಯಿ ಸೀತಮ್ಮ. ಅವರ ಬಾಲ್ಯ ತಂದೆಯ ಊರಾದಾ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲಿ ಕಳೆಯಿತು.

ಕುವೆಂಪು ಅವರ ಆರಂಭಿಕ ಶಿಕ್ಷಣ ಕೂಲಿಮಠದಲ್ಲಿ, ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು. ನಂತರ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲ್ ನಲ್ಲಿ ತಮ್ಮ ಶಿಕ್ಷಣ ಮುಂದುವರೆಸಿದರು. ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿಯನ್ನು, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿಯನ್ನು ಪಡೆದರು.

ಕುವೆಂಪು ಅವರು ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾದರೂ, ಪ್ರ್ರಾಂಶುಪಾಲರಾದರೂ ಆಗಿದ್ದರು. ನಂತರ ಉಪಕುಲಪತಿಗಳಾದರು. ತಮ್ಮ ಕನಸಿನ ಕೂಸಾದ ಗಂಗೋತ್ರಿಯನ್ನು ಕಟ್ಟಿ ಬೆಳೆಸಿದರು. ವಿಶ್ವವಿದ್ಯಾನಿಲಯವನ್ನು ಅಧ್ಯಯನ ಸಂಶೊಧನಾಂಗ ಹಾಗೂ ಪ್ರಸಾರಂಗ ಎಂಬುದಾಗಿ ವಿಭಾಗಿಸಿದರು. ಕಡಿಮೆ ಅವಧಿಯಲ್ಲಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಬರೆಸಿ ಕನ್ನಡ ಮಾಧ್ಯಮದಲ್ಲಿ ತರಗಳನ್ನು ಆರಂಭಿಸಿದರು.

ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಮಕ್ಕಳು.

ಕುವೆಂಪು ಅವರು ನವೆಂಬರ್ 11, 1994 ರಂದು ಮೈಸೂರಿನಲ್ಲಿ ನಿಧನರಾದರು. ಅವರ ಅಂತ್ಯ ಸಂಸ್ಕಾರ ಕುಪ್ಪಳಿಯಲ್ಲಿ ಜರುಗಿತು. ಅವರ ಸಮಾಧಿ ಇಂದು ಒಂದು ಸ್ಮಾರಕವಾಗಿದೆ.

ಕುವೆಂಪು ಅವರು 20 ನೇ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ, ತಮ್ಮ ಮೇರು ಕೃತಿ (ಶ್ರೀ ರಾಮಾಯಣ ದರ್ಶನಂ) ನಲ್ಲಿ ಈ ಕಾಲಕ್ಕೆ ಬೇಕಾದುದ್ದನ್ನು ನೀಡಿದ್ದಾರೆ. ಅವರ ಎರಡು ಬೃಹತ್ ಕಾದಂಬರಿಗಳಾದ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ ಅವರನ್ನು ಜಗತ್ತಿನ ಮಹಾನ್ ಕಾದಂಬರಿಗಳ ಸಾಲಿನಲ್ಲಿ ನಿಲ್ಲುವಂತೆ ಮಾಡಿದೆ. ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ.  ಅವರು 71 ಕೃತಿಗಳನ್ನು ಹೊರತಂದಿದ್ದಾರೆ.

ಶ್ರೀ ರಾಮಾಯಣ ದರ್ಶನಂ ಇವರ ಪ್ರಮುಖ ಮಹಾಕಾವ್ಯ, ಕೊಳಲು, ಪಾಂಚಜನ್ಯ, ನವಿಲು, ಕಲಾ ಸುಂದರಿ, ಕಥನ ಕವನಗಳು, ಕೋಗಿಲೆ ಮತ್ತು ಸೋವಿಯಟ್ ರಷ್ಯಾ, ಪ್ರೇಮ ಕಾಶ್ನೀರ, ಅಗ್ನಿಹಂಸ, ಕೃತ್ತಿಕೆ, ಪಕ್ಷಿಕಾಶಿ, ಕಿಂಕಿಣಿ, ಷೋಡಶಿ, ಚಂದ್ರ ಮಂಚಕೆ ಬಾ ಚಕೋರಿ, ಇಕ್ಷು ಗಂಗೋತ್ರಿ, ಅನಿಕೇತನಾ, ಜೇನಾಗುವ, ಅನುತ್ತರಾ, ಮಂತ್ರಾಕ್ಷತೆ, ಕದರಡತೆ, ಪ್ರೇತಕ್ಯೂ, ಕುಟೀಚಕ, ಹೊನ್ನ ಹೊತ್ತಾರೆ, ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ  ಇವರ ಪ್ರಮುಖ ಕವನ ಸಂಕಲನಗಳು, ಸನ್ಯಾಸಿ ಮತ್ತು ಇತರೆ ಕಥೆಗಳು, ನನ್ನ ದೇವರು ಮತ್ತು ಇತರೆ ಕಥೆಗಳು ಇವರ ಪ್ರಮುಖ ಕಥಾ ಸಂಕಲನಗಳು. ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಇವರ ಪ್ರಮುಖ ಕಾದಂಬರಿಗಳು. ಯಮನ ಸೋಲು, ಜಲಗಾರ, ಬಿರುಗಾಳಿ, ವಾಲ್ಮಿಕಿಯ ಭಾಗ್ಯ, ಮಹಾರಾತ್ರಿ, ಸ್ಮಾಶಾನ ಕುರುಕ್ಷೇತ್ರ, ರಕ್ತಾಕ್ಷಿ, ಶೂದ್ರ ತಪಸ್ವಿ, ಬೆರಳ್ಗೆ ಕೊರಳ್, ಬಲಿದಾನ, ಚಂದ್ರಹಾಸ, ಕಾನೀನ ಇವರ ಪ್ರಮುಖ ನಾಟಕಗಳು. ಮಲೆನಾಡಿನ ಚಿತ್ರಗಳು ಇವರ ಪ್ರಮುಖ ಪ್ರಬಂಧ. ಕಾವ್ಯ ವಿಹಾರ, ತಪೋನಂದ, ವಿಭೂತಿ ಪೂಜೆ, ದ್ರೌಪತಿ ಶ್ರಿಮುಡಿ, ರಸೋವೈಸಃ, ಇತ್ಯಾದಿ ಇವರ ಪ್ರಮುಖ ನಾಟಕಗಳು. ಕನ್ನಡ ಡಿಂಡಿಮ, ಕಬ್ಬಿಗನ ಕೈಬುಟ್ಟಿ, ಪ್ರಾರ್ಥನಾ ಗೀತಾಂಜಲಿ ಇವರ ಪ್ರಮುಖ ಆಯ್ದ ಸಂಕಲನಗಳು. ಜನಪ್ರಿಯ ವಾಲ್ಮಿಕಿ ರಾಮಾಯಣ ಇವರ ಪ್ರಮುಖ ಕೃತಿ. ಅಮಲನ, ಮೋಡಣ್ಣನ ತಮ್ಮ, ಹಾಳೂರು, ಬೊಮ್ಮನಹಲ್ಳಿಯ ಕಿಂದರಿ ಜೋಗಿ, ನನ್ನ ಗೋಪಾಲ, ನನ್ನ ಮನೆ, ಮೇಘಪುರ, ಮರಿ ವಿಜ್ಞಾನಿ, ನರಿಗಳಿಗೇಕೆ ಕೋಡಿಲ್ಲ ಇವರ ಪ್ರಮುಖ ಶಿಶು ಸಾಹಿತ್ಯ. ಸಾಹಿತ್ಯ ಪ್ರಚಾರ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ಷಷ್ಠಿ ನಮನ, ಮನುಜಮಥ-ವಿಶ್ವಪಥ, ವಿಚಾರ ಕ್ರಾಂತಿಗೆ ಆಹ್ವಾನ ಇವರ ಪ್ರಮುಖ ಭಾಷಣ ಲೇಖನ ಕೃತಿಗಳು, ಗುರುವಿನೊಡನೆ ದೇವಡಿಗೆ, ಕೊಲಂಬೋ ಇಂದ ಆಲ್ಮೊರಕೆ ಇವರ ಪ್ರಮುಖ ಅನುವಾದಿತ ಕೃತಿಗಳು, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಇವರ ಪ್ರಮುಖ ಜೀವನ ಚರಿತ್ರೆ ಕೃತಿಗಳು. ನೆನಪಿನ ದೋಣಿಯಲ್ಲಿ ಇವರ ಆತ್ಮಕಥನ ಅವರ ಕೃತಿಗಳು.

ಕುವೆಂಪು ಅವರ ಬೆರಳ್ಗೆ ಕೊರಳ್ ನಾಟಕವೂ, ಚಲನಚಿತ್ರವೂ ಆಗಿದೆ. ಕಾನೂರು ಹೆಗ್ಗಡತಿ ಕಾದಂಬರಿ ಚಲನಚಿತ್ರವಾಗಿದೆ. ಮಲೆಗಳಲ್ಲಿ ಮದುಮಗಳು ಧಾರವಾಹಿಯಾಗಿದೆ. 9 ಗಂಟೆಗಳ ಕಾಲ ಮೈಸೂರಿನ ರಂಗಾಯಣ ಹಾಗೂ ಬೆಂಗಳೂರಿನ ಕಲಾಗ್ರಾಮದಲ್ಲಿ ನಾಟಕಿಯವಾಗಿ ಪ್ರದರ್ಶನಗೊಂಡಿದೆ.

ಕುವೆಂಪು ಅವರು ಕೇಂದ್ರ ಸಾಹಿತ್ಯ ಅಕಾಡೆಮಿ (1955), ಪದ್ಮಭೂಷಣ (1958), ಜ್ಞಾನಪೀಠ ಪ್ರಶಸ್ತಿ (1968),  ಪಂಪ ಪ್ರಶಸ್ತಿ (1998), ಪದ್ಮವಿಭೂಷಣ (1989), ಕರ್ನಾಟಕ ರತ್ನ (1992),  ಕನ್ನಡ ವಿಶ್ವವಿದ್ಯಾನಿಲಯದಿಂದ ಮರಣೊತ್ತರ ನಾಡೋಜ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕುವೆಂಪು ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್ (1956), ರಾಷ್ಟ್ರಕವಿ ಪುರಸ್ಕಾರ (1964), ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್ (1966), ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಶಿಫ್ (1979) ಗೌರವ ಪುರಸ್ಕಾರಗಳು ದೊರೆತಿವೆ.

ಕುವೆಂಪು ಅವರು 1928 ರಲ್ಲಿ ಬೆಂಗಳೂರಿನ ಸೆಂಟ್ರೆಲ್ ಕಾಲೇಜು ಕರ್ನಾಟಕ ಸಂಘದ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನ, ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಹಾಗೂ 1957 ರಲ್ಲಿ ನಡೆದ 39 ನೇ ಕನ್ನಡ ಸಾಹಿತ್ಯ ಸಮ್ಮೇಲನದ ಅಧ್ಯಕ್ಷರಾಗಿದ್ದರು.